ಜುಲೈ 26, 2021

ಕುಸುಮ

ಕಾಗಿನೆಲೆಯ ಆದಿಕೇಶವನ
ದರುಶನಕೆ ನಿಂತಿರುವ ಸಂತ
ಕನಕದಾಸರ ಕೀರ್ತನೆಗಳ
ಜ್ಞಾನ ಬಂಡಾರ ಅನಂತ

ಕುಸುಮದಲಿ ಗಂಧವ
ಹೀರುವ ಜನರ ನಡುವೆ
ಗಂಧದೊಳ್ ಕುಸುಮ
ಹುಡುಕಿ ಅಲ್ಲಿ ‌ಕೇಶವನ ಕಂಡನು

ಮೇಲು‌ ಕೀಳಿನ ಜಗಳದಿ
ನಿಂತು ದೂರಾಗುವ ಜನರ
ಕುಲದ ನೆಲೆಯ ಪ್ರಶ್ನಿಸಿ
ನಿಂತ‌ ನೆಲವ ಅಲುಗಾಡಿಸಿದಂತೆ
ಕುಲ‌ ಕುಲ‌ ಕುಲವೆಂಬ
ನಂಬಿಕೆ ಅಪನಂಬಿಕೆಯ
ಒಮ್ಮೆಲೇ‌ದೂರವಾಗಿಸಿದ
ದಾಸರಯ್ಯ ಅವರು
ಶ್ರೀ ಕನಕದಾಸರು

ಜೂನ್ 22, 2021

ದೇವನಿರುವನು ನಮ್ಮೊಳಗೆ ಇರುವನು

ಕನ್ನಡಿಗರ ವೇದಿಕೆ‌ ಕಥಾ ಸ್ಪರ್ಧೆ
ವಿಷಯ: ಕೊರೊನ
ಕಥೆ ಹೆಸರು: *ದೇವನಿರುವನು, ನಮ್ಮೊಳಗೆ ಇರುವನು*



ಬೆಳಿಗ್ಗೆ ಬ್ಯಾಂಕ್ ಗೆ ಕೆಲಸಕ್ಕೆ ಬರುವಾಗ ಸಂಜೆ ಡ್ಯೂಟಿ ಮುಗಿಸಿಕೊಂಡು ಆದಷ್ಟು ಬೇಗನೇ ಹೊರಡುವ ಲೆಕ್ಕಾಚಾರ ಹಾಕಿಕೊಂಡೇ ಬಂದಿದ್ದೆ. ಮಧ್ಯಾಹ್ನ ಊಟ ಮಾಡಿ ಕೆಲಸ ಮುಗಿಸಿ ಇನ್ನೇನು ಹೊರಡುವ ಹೊತ್ತಿಗೆ ಕಾಲೇಜ್ ವಾಟ್ಸಾಪ್ ಗ್ರೂಪಿನಲ್ಲಿ ಕಾವ್ಯ ಅವರು ತಂಗಿಯ ಹೆರಿಗೆ ಆಪರೇಷನ್‌ ನಾಳೆ ಇರುವುದರಿಂದ ಬಿ ಪಾಸಿಟಿವ್ ರಕ್ತದ ಅಗತ್ಯವಿದೆ ಎಂದು ಮೆಸೇಜ್ ಕಳುಹಿಸಿದ್ದರು. ನನಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ನನ್ನದು ಎಬಿ ಪಾಸಿಟಿವ್ ರಕ್ತ ಆಗಿದ್ದರಿಂದ ಏನೂ ಸಹಾಯ ಮಾಡಲಾಗದ ಪರಿಸ್ಥಿತಿಯಲ್ಲಿದ್ದೆ. ಮತ್ತು ಹೊರಗೆ ಮಳೆ ಇನ್ನೂ ಜೋರಾಗಿ ಬರುತ್ತಿದ್ದರಿಂದ ಸ್ವಲ್ಪ ಹೊತ್ತು ಬ್ಯಾಂಕ್ ನಲ್ಲೇ ಇದ್ದು ನಂತರ ಹೋಗೋಣ ಅಂತ ಕಾಯುತ್ತಿದ್ದೆ. ಅಷ್ಟರಲ್ಲಿ ಬೇರೆ ಯಾವುದೇ ರಕ್ತದ ಗುಂಪಾದರೂ ನೆಡೆಯುತ್ತೆ, ಏಕೆಂದರೆ ರಕ್ತ‌ನಿಧಿಗೆ ಬದಲಿ ರಕ್ತ ಒದಗಿಸಿದರೆ ಆಯಿತು ಎಂಬ ಮಾಹಿತಿ ಬಂತು. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಡಬ್ಬಿ ಕಾರ್ ನಲ್ಲಿ ಇಟ್ಟುಕೊಂಡು ಶಿವಮೊಗ್ಗಕ್ಕೆ ಹೊರಟೆ. ಶಿವಮೊಗ್ಗ ತಲುಪಿ ರಕ್ತ ನೀಡಿ, ಅವರು ಕೊಟ್ಟ ಆರೆಂಜ್ ಜ್ಯೂಸ್ ಕುಡಿದು ಹೊರಗೆ ಬಂದು ಕುರ್ಚಿಯ ಮೇಲೆ ಕುಳಿತೆ. ಕಾವ್ಯ ಮತ್ತು ಅವರ ಅಮ್ಮ ಬಂದು ಮಾತನಾಡಿಸಿದರು. ಸರಿ, ಇನ್ನೇನು ಹೊರಡುವ ಸಮಯವಾಯಿತು, ಕತ್ತಲಾದರೆ ಪ್ರಯಾಣ ತೊಂದರೆಯಾಗುತ್ತದೆ ಎಂದು ನಾನು ಹೊಹೊರಡುತ್ತೇನೆ ಎಂದು ಹೇಳಿ ಹೊರಟೆ. 

ಬರುವಾಗ ಪಿಇಎಸ್ ಕಾಲೇಜ್ ನಿಂದ ಮುಂದೆ ಒಂದು ಹಳ್ಳಿಯಲ್ಲಿ ಹೋಟೆಲ್ ನಲ್ಲಿ ಊಟ ಪಾರ್ಸಲ್ ತೆಗೆದುಕೊಂಡು ಸಾಗರದ ಕಡೆ ಹೊರಟೆ.  
ಮುಂದೆ ಆನಂದಪುರದಲ್ಲಿ ಪೊಲೀಸ್ ಸಬ್‌ ಇನ್ಸ್ಪೆಕ್ಟರ್ ಒಬ್ಬರು ಲಿಫ್ಟ್ ಕೇಳಿದರು. ಕಾರ್‌ ನಿಲ್ಲಿಸಿ ಹಿಂದಿನ‌ ಸೀಟ್ ಗೆ‌ ಹತ್ತಿಸಿಕೊಂಡೆ. ಅಲ್ಲೇ‌ ಪಕ್ಕದಲ್ಲಿ ಸ್ಯಾನಿಟೈಸರ್ ಡಬ್ಬಿಯಿಂದ ಸ್ವಲ್ಪ ಕೈಗೆ ಹಾಕಿಕೊಂಡು ಕೈ ತೊಳೆದುಕೊಂಡರು. ಮತ್ತೆ ಮುಂದೆ ಹೊರಟು ಒಂದ್ ಐದು ಕಿಲೋಮೀಟರ್ ಸಾಗಿದ ನಂತರ ಒಂದು ನದಿ ಸೇತುವೆ ಹತ್ತಿರ ಮಳೆ ಬಂದು ನೀರೆಲ್ಲಾ ತುಂಬಿ ರಸ್ತೆ ತುಂಬಾ ಗುಂಡಿ ಬಿದ್ದು ಹೋಗಿತ್ತು. ಇರೋದರಲ್ಲೇ ಸ್ವಲ್ಪ ಅನುಸರಿಸಿಕೊಂಡು ನಿಧಾನವಾಗಿ ಹೋಗೋಣ ಅಂತ ಕಾರ್ ನಿಧಾನವಾಗಿ ಚಲಾಯಿಸುತ್ತಿದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಅವರು ಕಾರ್ ನಿಂದ ಇಳಿದು ಓಡಿ ಹೋಗಿ ಸೇತುವೆಯ ಹತ್ತಿರ ನಿಂತರು. ಚಲಿಸುತ್ತಿದ್ದ ಕಾರ್ ನಿಂದ ಏಕಾ ಏಕಿ ಅವರು ಇಳಿದು ಹೋಗಿದ್ದು ನೋಡಿ ನನಗೂ ಆತಂಕವಾಯಿತು. ಕಾರ್‌ ನಿಲ್ಲಿಸಿ ಸೇತುವೆಯ ಹತ್ತಿರ ಹೋದೆ, ಅಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆಯಿಂದ ಇನ್ನೇನು ಜಿಗಿಯುವನಿದ್ದ. ಪ್ರದೀಪ್ ಸರ್ ಇಳಿದು ಹೋಗಿ ಓಡುವ ಹೊತ್ತಿಗೆ ಅವನು ನಿಂತ. ನಾನೂ ಅವರ ಪಕ್ಕ ಹೋಗಿ ನಿಂತೆ. ಹತ್ತಿರ ಬಂದರೆ ಕೂಡಲೇ ನದಿಗೆ ಬೀಳುವುದಾಗಿ ಹೆದರಿಸಿದ. ಪ್ರದೀಪ್ ಸರ್ ಅವರ ಫೋನ್ ನನಗೆ ಕೊಟ್ಟು ಲೋಕೇಶ್ ಅನ್ನುವ ನಂಬರ್ ಗೆ ಕರೆ ಮಾಡಿ ಬೇಗ ಬರಲಿಕ್ಕೆ ಹೇಳಿ ಎಂದರು. ನಾನು ಈ ಕಡೆ ಬಂದು ಲೋಕೇಶ್ ಅವರಿಗೆ ಫೋನ್ ಮಾಡಿ ಎಲ್ಲಾ ವಿಷಯ ವಿವರಿಸಿ ಬೇಗ ಬರಲು ಹೇಳಿ ಫೋನ್ ಇಟ್ಟೆ. ಅಷ್ಟರಲ್ಲಿ ಈ ಕಡೆ ಪ್ರದೀಪ್ ಸರ್ ಆ ವ್ಯಕ್ತಿಯನ್ನು ಆತ್ಮಹತ್ಯೆ ಪ್ರಯತ್ನವನ್ನು ನಿಲ್ಲಿಸುವಂತೆ ಮನವೊಲಿಸಿ ಅವನನ್ನು ಕಾಪಾಡಿ ಕಾರ್ ನಲ್ಲಿ ಕೂರಿಸಿದ್ದರು. ನಾನು ಕುಡಿಯಲು ನೀರು ಮತ್ತು ಆರೆಂಜ್ ಜ್ಯೂಸ್ ಕೊಟ್ಟು, ಮಾಸ್ಕ್ ನೀಡಿದೆ. ಅಷ್ಟರಲ್ಲಿ ಕಾನ್ ಸ್ಟೇಬಲ್ ಲೋಕೇಶ್ ಮತ್ತು ಅವರ ತಂಡ ಪೊಲೀಸ್ ಜೀಪ್ ನಲ್ಲಿ ಸೇತುವೆ ದಾಟಿ ಬಂದು ವಿಷಯದ ಬಗ್ಗೆ ಮಾಹಿತಿ ಪಡೆದರು. 

ಕೊರೋನ ಮಹಾಮಾರಿಯ ಹೊಡೆತದಿಂದ ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು, ಲಾಕ್ ಡೌನ್ ನಲ್ಲಿ ಊರಲ್ಲಿ ಕೆಲಸ ಸಿಗದೆ, ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಬಿಕ್ಕಿ ಬಿಕ್ಕಿ ಅಳುತ್ತಾ ವಿವರಿಸುತ್ತಿದ್ದ. ಆಗ ಕಾವ್ಯ ಅವರ ಫೋನ್ ಬಂತು. ಅವರ ತಂಗಿಯ ಹೆರಿಗೆಯ ವಿಷಯದಲ್ಲಿ ಏನೋ ಸಮಸ್ಯೆಯಾಗಿ ನಾಳೆ ಮಾಡಬೇಕಿದ್ದ ಆಪರೇಷನ್ ಈಗಲೇ ಮಾಡಿದ್ದಾರೆ. ಎಲ್ಲಾ ಚೆನ್ನಾಗಿ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಅಂತ ಹೇಳಿದರು. ನಾನು‌ ಪ್ರದೀಪ್ ಸರ್ ಗೆ ಆ ವ್ಯಕ್ತಿಯ ಜೀವ ಉಳಿಸಿದ್ದಕ್ಕೆ ಧನ್ಯವಾದ ಹೇಳಿ, ಶಿವಮೊಗ್ಗಕ್ಕೆ ಹೋಗಿ ವಾಪಸ್ ಬರುತ್ತಿದ್ದ ಬಗ್ಗೆ ಹೇಳಿ ಹೆಣ್ಣು ಮಗು ಹುಟ್ಟಿದ ಗುಡ್ ನ್ಯೂಸ್ ತಿಳಿಸಿದೆ. ಎಲ್ಲಾ ಸರಿ ಆಗಿ, ಎಲ್ಲಾ ಒಳ್ಳೆಯದಾಯಿತು ಬಿಡಿ, Thank God ಅಂತ ಅವರು ಜೀಪ್ ಹತ್ತಿ, ನಾನು ನನ್ನ ಕಾರ್ ಹತ್ತಿ ಹೊರಡುವ ಹೊತ್ತಿಗೆ ಎದುರಿಗಿದ್ದ ಸೇತುವೆ ಕುಸಿಯಿತು. ಎಲ್ಲೋ ಹೋರಾಟ ಮಾಡುತ್ತಿದ್ದ ಎರಡು ಜೀವಗಳು ನನ್ನ ಮತ್ತು‌ ಪ್ರದೀಪ್‌ ಸರ್ ‌ಸಹಾಯದಿಂದ ಮತ್ತೊಂದು ಸೂರ್ಯೋದಯ ನೋಡುವಂತಾಯಿತು. ಅಲ್ಲೆಲ್ಲೋ ಉಳಿದ ಜೀವಗಳು ಹರಸಿ ನಮ್ಮೆರಡು ಜೀವಗಳು ಸೇಯುವೆ ಕುಸಿತದಿಂದ ನಮ್ಮ ಪ್ರಾಣ ಹೋಗುವುದನ್ನು ತಪ್ಪಿಸಿದವು. ಕೊರೊನದಿಂದ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವಾಗ ದೇವರು ನಮ್ಮ ಮುಖದ ‌ಮೇಲೆ ಮಂದಹಾಸ ಮೂಡಲು ಸಣ್ಣ ಸಣ್ಣ ಕಾರಣ ಕೊಡುತ್ತಾನೆ, ಅವುಗಳಿಗೆ ನಾವು ಕಾಯಬೇಕು ಎಂದುಕೊಂಡು ಕಾರ್ ನಲ್ಲಿ ಬೇರೆ ಹಳ್ಳಿ ದಾರಿಯಲ್ಲಿ ‌ಮನೆ‌ಕಡೆ‌ ಹೋಗುತ್ತಿದ್ದೆ. ಅಷ್ಟರಲ್ಲಿ ಕಾವ್ಯ ಅವರಿಂದ ಮತ್ತೊಂದು ಸಂದೇಶ ಬಂದಿತು. ಏನು‌ ಅಂತ ನೋಡಿದಾಗ ತಾಯಿ ಮಗು ಜೊತೆಯಾಗಿ ನಗುತ್ತಿದ್ದ ಫೋಟೋ ಅದರಲ್ಲಿತ್ತು. ನೋಡಿ ಸಂತಸದಿಂದ ಮನೆ ಕಡೆ ಹೊರಟೆ. 

ಜೂನ್ 13, 2021

ಮುಂದೆ ನೋಡೋಣ

ಅವ್ವ ಪುಸ್ತಕಾಲಯದ ವತಿಯಿಂದ ಆಯೋಜಿಸಿದ್ದ ನ್ಯಾನೋ ಕಥೆ ಸ್ಪರ್ಧೆಗಾಗಿ ಕಳುಹಿಸಿದ್ದ ಕಥೆ, ಆಯ್ಕೆಯಾಗಲಿಲ್ಲ ಆ ಮಾತು ಬೇರೆ!!


***

ಶುಕ್ರವಾರ ಆಫೀಸ್‌ ಮುಗಿಸಿ ಮನೆಗೆ ಬಂದೆ. ವಾರಾಂತ್ಯ ಮತ್ತು ಹಬ್ಬದ ಪ್ರಯುಕ್ತ ನಾನು ಮತ್ತು ಕಾವ್ಯ ಒಂದು ವಾರ ರಜೆಯನ್ನು ಊರಲ್ಲಿ ಕಳೆಯೋಣ ಎಂದು ನಿರ್ಧರಿಸಿ ಶನಿವಾರ ಬೆಳಿಗ್ಗೆ 6ಕ್ಕೆ ಬನಶಂಕರಿ ಬಿಟ್ಟು ಚಿತ್ರದುರ್ಗಕ್ಕೆ ಹೊರಟೆವು. ಬರುವಾಗ ದಾರಿಯಲ್ಲಿ ಕ್ಯಾತ್ಸಂದ್ರದ ಹತ್ತಿರ ತಟ್ಟೆ ಇಡ್ಲಿ ತಿಂದು ಮುಂದೆ ಸಾಗಿದೆವು. ಮನೆ ಹತ್ತಿರ ಬಂದ ಹಾಗೆ ಊರಿಗೆ ಹೋಗಿ ಏನು‌ ಮಾಡಬೇಕು? ಒಂದು ವಾರ ರಜೆಯನ್ನು ಎಲ್ಲೆಲ್ಲಿ ಹೋಗಬಹುದು? ತಿರುಗಿ ಬೆಂಗಳೂರಿಗೆ ಬಂದಾಗ ಆಫೀಸ್ ನಲ್ಲಿ‌ ಎದುರಾಗಬಹುದಾದ ಹೆಚ್ಚುವರಿ ಕೆಲಸ ಹೇಗೆ ಏನು ಅಂತ ಚಿಂತೆಯಾಗತೊಡಗಿತು. ಯೋಚನೆಗಳ ಸುಳಿಯಲ್ಲಿ ಹಿರಿಯೂರಿನ ಬಳಿ ತಿರುವು ತಗೊಂಡು ‌ಎಡಕ್ಕೆ ಹೋಗಬೇಕಾದವನು ಹಾಗೇ ಮುಂದೆ ಹೋಗಿ ಬಿಟ್ಟೆ. ಪಕ್ಕದಲ್ಲಿ ಕಾವ್ಯ ಇನ್ನೂ ಮಲಗೇ ‌ಇದ್ದಳು. ಮುಂದೆ‌ ಹೋಗಿ ಯೂ‌ ಟರ್ನ್ ಹೊಡೆದು ವಾಪಸ್ ಬಂದು ಚಿತ್ರದುರ್ಗದ ಕಡೆ ತಿರುವು ಪಡೆದು ಹಳೇ ಹಾಡು ಗುನುಗುತ್ತಾ ಸಾಗುತ್ತಿದ್ದೆ. ಹಾಗೇ ನಿಧಾನವಾಗಿ ಹೋಗುವಾಗ ಪಕ್ಕದಲ್ಲೇ ಎಳನೀರು ಅಂಗಡಿ‌ ಕಾಣಿಸಿತು. ಎಳನೀರು‌ ಕುಡಿಯುತ್ತಾ ನಿಂತಾಗ ರೇಡಿಯೋದಲ್ಲಿ ಈ ಮೊದಲು ಗುನುಗುತ್ತಿದ್ದ ಅದೇ ಹಾಡು ಶುರುವಾಯಿತು. ಹಾಡು ಮುಗಿದು ಎಳನೀರು ಖಾಲಿಯಾಗುವ ಹೊತ್ತಿಗೆ ಆಫೀಸ್ ಮತ್ತು ಭವಿಷ್ಯದ ಯೋಚನೆ ಮತ್ತೆ ಆವರಿಸಿತು.

ಕಾವ್ಯ: ಏನು ಚಿಂತೆ?

ನಾನು: ಏನಿಲ್ಲ.

ಕಾವ್ಯ: ಇಂದಿನ ಚಿಂತೆ‌ ಇಂದಿಗೆ ಸಾಕು, ಮುಂದಿನ ಚಿಂತೆ ಬಂದಾಗ‌ ನೋಡೋಣ. ಈಗ ಹೋಗೋಣ?

ನಾನು: ಹ್ಹ ಹ್ಹ, ಬನ್ನಿ ಹೋಗೋಣ.

ಎಳನೀರಿನ ಒಳಗೆ ನನ್ನ ಚಿಂತೆ ಆಲೋಚನೆಗಳನ್ನು‌ ತುಂಬಿ ಅದನ್ನು ಅಲ್ಲೇ ಎಸೆದೆ.

ಏಪ್ರಿಲ್ 28, 2021

The Butterfly Effect

          ಅಮೇರಿಕಾದ ಓಹಾಯೋ ರಾಜ್ಯದ ದೊಡ್ಡ ನಗರ ಸಿನ್ಸಿನಾಟಿಯಲ್ಲಿ ಹುಟ್ಟಿ ಬೆಳೆಯ ಸ್ಟೆಲ್ಲಾ ಥಾಮ್ಸನ್ ಅತಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡಳು. ತಂದೆ ಪ್ರಸಿದ್ಧ ಕಾಲೇಜಿನಲ್ಲಿ ಫಿಸಿಕ್ಸ್ ಲೆಕ್ಚರರ್. ಹೈಸ್ಕೂಲ್ ನಲ್ಲಿ ಸುಮ್ಮನೆ ಷೇಕ್ಸ್ಪಿಯರ್ ಡ್ರಾಮಾ ಮಾಡಲು ಆಡಿಷನ್ ನೀಡಿದ್ದಳು. ಆನಂತರ 2011ರಲ್ಲಿ ಫ್ಲೈಟ್ ಹತ್ತಿ ಹಾಲಿವುಡ್ ನಗರಿಗೆ ಬಂದಿಳು. ಲಾಸ್ ವೇಗಾಸ್ ನಲ್ಲಿ ಸ್ಟೆಲ್ಲಾ ಅದೃಷ್ಟ ಬಹು ದೊಡ್ಡದಾಗಿ ಕೈ ಹಿಡಿಯದಿದ್ದರೂ ಮೊದಲು ನಟಿಸಿದ There's No God Up Here ಧಾರವಾಹಿ ಐದು ಸೀಸನ್ ಗಳಷ್ಟು ಓಡಿ ಥಾಮ್ಸನ್ ಅತಿ ಬೇಗನೇ ಪ್ರಖ್ಯಾತಿ ಪಡೆದಳು. ಇನ್ನುಳಿದಂತೆ ಅವಳು ಮಾಡಿದ್ದೆಲ್ಲವೂ College Undefined, Be There for Me ಹೆಸರಿನ ಕಾಲೇಜ್ ರಾಮ್-ಕಾಮ್, Destiny Retold, Racing DNA ಎಂಬ ಸಣ್ಣ ಆ್ಯಕ್ಷನ್ ಚಿತ್ರಗಳಾಗಿದ್ದವು. ಸ್ಟೆಲ್ಲಾ ಗಿಟಾರ್ ಕಲಾವಿದ ಮಿಕ್ಕಿ ರಡಾಲ್ಫ್ ನನ್ನು ಕೆಲವುಕಾಲ ಬಹುವಾಗಿ ಪ್ರೀತಿಸಿದ್ದಳು. ಧಾರವಾಹಿ, ಸಿನಿಮಾ, ಇಂಟರ್ ವ್ಯೂ ಇವೆಲ್ಲದರ ನಡುವೆ ತನ್ನದೊಂದು ಸ್ವಂತ ಅಪಾರ್ಟ್ಮೆಂಟ್ ಕೂಡ ಕೊಂಡಿದ್ದಳು. ಒಂದು ದಿನ ಸಿಟಿ ಹಾಲ್ ಗೆ ಯಾವುದೋ ಸ್ಪೀಡ್ ಟಿಕೆಟ್ ಪಾವತಿ ಮಾಡಲು ಮಾಡಲು ಕ್ಯೂ ನಲ್ಲಿ ನಿಂತಾಗ ಗನ್ ಹಿಡಿದು ಬಂದ ಮೂವರು 22 ತಾಸುಗಳ ವರೆಗೆ ಅಲ್ಲಿನ ಜನರನ್ನು ಬಂಧಿಯಾಗಿಸಿಕೊಂಡಿದ್ದರು. ಪೊಲೀಸ್ ಶೀಘ್ರವಾಗಿ ಕ್ರಮ ಕೈಗೊಂಡರೂ ಎರಡು ಮಹಿಳೆ ಮತ್ತು ಒಬ್ಬ ಪುರುಷನ ಸಾವಾಗಿ ಸಿಟಿ ಹಾಲ್ ನಲ್ಲೇ ತಮ್ಮ ಕೊನೆಯುಸಿರೆಳೆದರು. ಪೊಲೀಸ್ ಕಾರ್ಯಾಚರಣೆಯ ಅಂತ್ಯದಲ್ಲಿ ಸ್ಟೆಲ್ಲಾ ಯಾವುದೇ ದೈಹಿಕ ಹಾನಿಯಾಗದೇ ಮನೆಗೆ ಬಂದರೂ, ಮಾನಸಿಕವಾಗಿ ತುಂಬಾ ಘಾಸಿಯಾಗಿದ್ದಳು. ಎರಡು ಮೂರು ತಿಂಗಳು ಯಾವುದೇ ಸಿನಿಮಾ ಮಾಡಲಿಲ್ಲ, ಅಂತರ್ಮುಖಿಯಾಗಿ ಯಾವಾಗಲೂ ತನ್ನ ಅಪಾರ್ಟ್ಮೆಂಟ್ ನಲ್ಲಿ ಒಬ್ಬಳೇ ಮಿಕ್ಕಿ ಹಾಡುಗಳನ್ನು ಕೇಳುತ್ತಾ ಡಿಪ್ರೆಷನ್ ಗೆ ಒಳಗಾಗಿದ್ದಳು

 

            2014 ರಲ್ಲಿ ನನಗೆ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಕೆಲಸಸಿಕ್ಕಿತು. ಭಾನುವಾರ ರಜಾ, ದಿನ ರೂಮಲ್ಲೇ ಏನಾದರೂ ಅಡುಗೆ ಮಾಡಿಕೊಂಡು, ಮಧ್ಯಾಹ್ನ ಮಲಗಿ, ಸಂಜೆ ಕೋರಮಂಗಲ ಕಡೆ ಶಾಪಿಂಗ್ ಅಂತ ಒಂದರೆಡು ತಾಸು ಅಡ್ಡಾಡಿ ಬಂದರೆ ವೀಕೆಂಡ್ ಮುಕ್ತಾಯ. ಹೀಗೆ ಒಂದು ದಿನ ಮೊಬೈಲ್ ನಲ್ಲಿ ಏನೋ ನೋಡುತ್ತಾ ಅದು ಇದು ಜೋಕ್ಸ್ ನೋಡಿಕೊಂಡು ಕುಳಿತಿದ್ದೆ. ಹಾಗೇ ಒಂದೆರಡು ಸ್ವಂತ ರಚನೆಯ ಕವಿತೆಗಳು ಹೊರಬಂದವು. ಏನೇನು ಯೋಚನೆ ಬರುತ್ತೋ, ಯಾವಾಗ್ಯಾವಾಗ ಬರುತ್ತೋ, ಅದನ್ನೆಲ್ಲಾ ಹಾಗೇ ದಾಖಲಿಸಿ ಬ್ಲಾಗ್ ಗೆ ಸೇರಿಸುತ್ತಾ ಹೋದೆ.

 

          ಅದೇ ಸಮಯದಲ್ಲಿ ಲಾಸ್ ವೇಗಾಸ್ ನಲ್ಲಿ ಸ್ಟೆಲ್ಲಾ ಇನ್ಲಿಲ್ಲದಂತೆ ಡಿಪ್ರೆಶನ್ ಗೆ ಒಳಗಾಗಿದ್ದಳು. ಆಕೆಯ ಬಾಯ್ ಫ್ರೆಂಡ್ ಮಿಕ್ಕಿ ಕೂಡ ದೂರವಾಗಿ ಬೇರೆ ಹುಡುಗಿಯ ಜೊತೆ ವಿವಾಹವಾಗಿದ್ದ. ಸ್ಟೆಲ್ಲಾ ಥಾಮ್ಸನ್ ಡಿಪ್ರೆಶನ್ ಜೊತೆ ಹೋರಾಟದಲ್ಲಿ ಊಟ ತಿಂಡಿ ಕಮ್ಮಿಯಾಗಿ ಪೂರ್ತಿ ಸೊರಗಿ ಹೋಗಿದ್ದಳು. ಗ್ರಾಂಡ್ ಕ್ಯಾನ್ಯಾನ್, ಎಂಪೈರ್ ಸ್ಟೇಟ್ ಬಿಲ್ಡಿಂಗ್, ನ್ಯೂಯಾರ್ಕ್ ಸೆಂಟ್ರಲ್ ಪಾರ್ಕ್, ಮಿನ್ನೇಸೋಟ ಎಲ್ಲಾ ಕಡೆ ತಿರುಗಿದರೂ ಅವಳಿಗೆ ಬದುಕಬೇಕು ಎಂಬ ಎಳ್ಳಷ್ಟೂ ಜೀವನೋತ್ಸಾಹ ಬರಲಿಲ್ಲ. ಕೊನೆಯ ಸ್ಥಳ ಎಂಬಂತೆ ಕ್ಯಾಲಿಫೋರ್ನಿಯಾದ ಗೋಲ್ಡನ್ ಗೇಟ್ ಬ್ರಿಡ್ಜ್ನಿಂದ ಬಿದ್ದು ಸಾವನ್ನಪ್ಪುವ ನಿರ್ಧಾರ ಮಾಡಿದ್ದಳು. ಕೊನೆಯ ಇಪ್ಪತ್ತು ನಿಮಿಷದ ಅವಧಿಯಲ್ಲಿ ಅವಳ ತಂದೆ ಫೋನ್ ಅಚಾನಕ್ ಆಗಿ ಬಂದಿತ್ತು. ಎಲ್ಲಾ ಸಹಜವಾಗಿದೆ ಎಂಬ ರೀತಿಯಲ್ಲಿ ಮಾತನಾಡಿ ಕರೆ ಮುಕ್ತಾಯಗೊಳಿಸಿದ್ದಳು. ಸ್ಟೆಲ್ಲಾ ತಂದೆಗೆ ಅವಳ ದನಿಯಲ್ಲಿ ಮೊದಲಿನ ಉತ್ಸಾಹ ಇಲ್ಲದಿರುವುದು ತಿಳಿಯಿತು. 911 ಗೆ ಕರೆ ಮಾಡಿ ತನ್ನ ಮಗಳು ಗೋಲ್ಡನ್ ಗೇಟ್ ಬ್ರಿಡ್ಜ್ ನಿಂದ ಬಿದ್ದು ಪ್ರಾಣ ಬಿಡಬಹುದೇನೋ ಎಂಬ ಆತಂಕವಿದೆ ಎಂದು ಹೇಳಿದರು‌. ಸ್ಟೆಲ್ಲಾ ಬ್ರಿಡ್ಜ್ ಮೇಲೆ ಒಬ್ಬಳೇ ನೆಡೆದು ಬರುವಾಗ ಅವಳ ಮನದಲ್ಲಿ ಹೆಜ್ಜೆ ಹೆಜ್ಜೆಗೂ ಆತಂಕ, ಸಂಕಟ ಜಾಸ್ತಿಯಾಗುತ್ತಿತ್ತು. ಅರ್ಧ ಬ್ರಿಡ್ಜ್ ದೂರ ಕ್ರಮಿಸುವುದರಲ್ಲಿ ಯಾರಾದರೂ ನನ್ನ ನೋಡಿ ಸ್ಮೈಲ್ಮಾಡಿದರೆ, ಅಥವಾ ಯಾರಾದರೂ ಸಂತೋಷವಾಗಿರುವದನ್ನು ನಾನು ನೋಡಿದರೆ ಸೂಸೈಡ್ ಪ್ಲಾನ್ ಬಿಟ್ಟು ಹೊಸ ಜೀವನ ಶುರು ಮಾಡಬೇಕೆಂದು ನಿರ್ಧರಿಸಿದ್ದಳು. ಆದರೆ ಅರ್ಧ ಬ್ರಿಡ್ಜ್ ದೂರ ನೆಡೆದರೂ ಒಂದೂ ಖುಷಿಯಿಂದ ನಕ್ಕ ಮುಖ ಕಾಣಲಿಲ್ಲ. ಸ್ಟೆಲ್ಲಾ ಇನ್ನೇನು ಹಾರಬೇಕು ಎಂಬ ಸಮಯಕ್ಕೆ ಅವಳ ಫೋನ್ ಗೆ ಒಂದು ವೆಬ್ಸೈಟ್ ಪುಷ್ನೋಟಿಫಿಕೇಷನ್ ಸೌಂಡ್ ಮಾಡಿತು. ಏನೆಂದು ನೋಡೋಣ ಅಂತ ಅವಳ ಐಫೋನನ್ನು ಜಾಕೆಟ್ ನಿಂದ ಹೊರ ತೆಗೆದಳು. ಸ್ಟೆಲ್ಲಾ ಅಭಿನಯದ Destiny Retold ಚಿತ್ರದ ಬಗ್ಗೆ ಕೋರಮಂಗಲದ ಕಾಮಿಡಿ ಕ್ಲಬ್ ನಲ್ಲಿ ಒಂದು ದಿನ ನಾನು ಹೇಳಿದ್ದ ಜೋಕ್ ಗಳ 3 ನಿಮಿಷದ ವಿಡಿಯೋ ವೈರಲ್ ಆಗಿ ಫೋನಿಂದ ಫೋನಿಗೆ ಹೋಗಿ ಸ್ಟೆಲ್ಲಾ ಫೋನನ್ನು ಕ್ಷಣಕ್ಕೆ ತಲುಪಿತ್ತು. ವಿಡಿಯೋ ಓಪನ್ ಮಾಡಿದ ಸ್ಟೆಲ್ಲಾ ಇನ್ನಿಲ್ಲದಂತೆ ನಕ್ಕಳು. ಮನದ ಎಲ್ಲಾ ದುಃಖ ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾದಂತೆ ನಕ್ಕಳು. ಅಷ್ಟು ಹೊತ್ತಿಗೆ ಆಗಲೇ ಕ್ಯಾಲಿಫೋರ್ನಿಯಾ 911 ಕರೆಗೆ ಸ್ಪಂದಿಸಿ ಗೋಲ್ಡನ್ ಗೇಟ್ ಬ್ರಿಡ್ಜ್ ಬಳಿ ಬಂದಿದ್ದರು. ಸೂಸೈಡ್ ಐಡಿಯಾವನ್ನು ಸ್ಟೆಲ್ಲಾ ಕೂಡ ಆಗಲೇ ಕೈ ಬಿಟ್ಟಿದ್ದಳು. ಅವಳನ್ನು ಪೊಲೀಸರು ಅಲ್ಲಿಂದ ಕರೆದುಕೊಂಡು ಹೋಗಿ ಮನೆ ತಲುಪಿಸಿದರು

 

          ಒಂದು ವರ್ಷ ಇಂದಿರಾ ನಗರದಲ್ಲಿ ಕೆಲಸ ಮಾಡಿದ ನಂತರ ಸಾಗರದ ಬಳಿ ಹೊಸಹಳ್ಳಿ ಶಾಖೆಗೆ ನನಗೆ ವರ್ಗಾವಣೆಯಾಯಿತು. ಹೀಗಿದ್ದಾಗ ಒಂದು ದಿನ ಒಬ್ಬ ವ್ಯಕ್ತಿ ಬ್ಯಾಂಕ್ ಒಳಗೆ ಬಂದು ಅಲ್ಲಿಇದ್ದ ಎಲ್ಲಾಗ್ರಾಹಕರನ್ನು ಬ್ಯಾಂಕ್ ಸೇಫ್ ಕೋಣೆಗೆ ಹೋಗಲು ಹೇಳಿ ಬಾಗಿಲನ್ನು ತಳ್ಳಿದನು. ಬ್ಯಾಂಕ್ ಒಳಭಾಗದಲ್ಲಿ ಈಗ ಮ್ಯಾನೇಜರ್, ಮೇಡಮ್, ನಾನು, ಅಟೆಂಡರ್ ಮತ್ತು ಮಚ್ಚು ಹಿಡಿದಿದ್ದ ವ್ಯಕ್ತಿ ಮಾತ್ರ ಇದ್ದೆವು. ಒಂದೆರಡುಸಲ ಅವನಮುಖ ನೋಡಿದಾಗ ಆತ ಪಂಚಾಯಿತಿ ಅಟೆಂಡರ್ ದುರ್ಗಪ್ಪನ ಮಗ ಶೇಖರ ಅಂತ ಗೊತ್ತಾಯಿತು. ಬ್ಯಾಂಕಿನಲ್ಲಿ ಇರುವ ಹಣಕ್ಕೆ ಸರ್ಕಾರಿ ವಿಮೆ ಇರುತ್ತದೆ. ರೀತಿ ದರೋಡೆ, ಕಳ್ಳತನ ಏನಾದರೂ ಆದಾಗ ಸಂಪೂರ್ಣ ಹಣ ಕ್ಲೈಮ್ ಆಗುತ್ತದೆ. ಆದ್ದರಿಂದ ಯಾವುದಕ್ಕೂ ರಿಸ್ಕ್ ಬೇಡ, ಜೀವ ಉಳಿಸಿಕೊಂಡರೆ ಸಾಕು ಅಂತ ನಾವೆಲ್ಲಾ ಹ್ಯಾಂಡ್ಸ್ ಅಪ್ ಮಾಡಿ ಸುಮ್ಮನೆ ನಿಂತಿದ್ದೆವು. ಕಾಕತಾಳೀಯ ಎಂಬಂತೆ ಅಂದು ಕೌಂಟರ್ ನಲ್ಲಿ ಎರಡುಲಕ್ಷಕ್ಕಿಂತ ಹೆಚ್ಚು ದುಡ್ಡು ಇರಲಿಲ್ಲಸಿಕ್ಕಿದಷ್ಟು ಅಂತ ಆತುರದಲ್ಲಿ ಎಷ್ಟು ಬೇಕೋ ಅಷ್ಟು ದುಡ್ಡು ಬ್ಯಾಗ್ ಗೆ ತುಂಬಿಕೊಂಡು ಶೇಖರ ಓಡುತ್ತಿದ್ದ. ಬಾಗಿಲಬಳಿಶಟರ್ ಎತ್ತಿಓಡುತ್ತಿದ್ದ ಅವನನ್ನು ನಾನು ಮತ್ತು ಶ್ರೀಧರ್ ಸರ್ ಎಳೆದು ತಡೆದೆವು. ಅಷ್ಟರಲ್ಲಿ ಅವನ ಕೈಯ್ಯಲ್ಲಿದ್ದ ಮಚ್ಚು ಬೀಸಿದ. ಒಂದು ಸಲಕ್ಕೆಇಬ್ಬರೂ ತಪ್ಪಿಸಿಕೊಂಡೆವು. ಬ್ಯಾಗ್ ಅವನಹೆಗಲುಜಾರಿ ನಮ್ಮ ಕೈಗೆ ಬಂದಿತು. ಅವನು ಇನ್ನೊಂದು ಸಲಮಚ್ಚು ತೋರಿಸಿ ನಮಗೆ ಹೆದರಿಸಿ ಬ್ಯಾಗ್ ತೆಗೆದುಕೊಂಡು ಹೋಗಲುಪ್ರಯತ್ನಿಸಿದ. ಆದರೆ ಅಷ್ಟರಲ್ಲಿ ಹೊರಗೆ ಜನ ಹೆಚ್ಚಾಗಿ ಜಮಾವಣೆ ಆಗಿದ್ದರು. ಇನ್ನೂ ತಡ ಮಾಡಿದರೆ ಕಷ್ಟ ಅಂತ ಓಡಿದ. ಇದೆಲ್ಲದರ ನಡುವೆ ಅವನು ಬೀಸಿದ್ದ ಮಚ್ಚು ನನ್ನ ಎಡಗೈಗೆ ಬಂದು ತಾಕಿ ತುಂಬಾ ರಕ್ತ ಹಾನಿಯಾಗಿತ್ತು. ಹೆಚ್ಚು ಕಮ್ಮಿ ₹39,000/- ಮಾತ್ರ ಕದ್ದು ಹೋಗುವಲ್ಲಿ ಅವನು ಯಶಸ್ವಿಯಾದ. ಒಳಗಿದ್ದ ಜನರನ್ನು ಹೊರಗೆ ಕಳುಹಿಸಿ, ಶಟರ್ಲಾಕ್ ಮಾಡಿ, ಕೂಡಲೇ ಹಣವನ್ನು ಎಣಿಸಿ, ಪ್ರಾದೇಶಿಕ ಕಛೇರಿಗೆ ಫೋನ್ ಮಾಡಿ ಎಲ್ಲಾ ವಿವರ ಮುಟ್ಟಿಸಿಲಾಯಿತು. ನಾನು ನಮ್ ಅಟೆಂಡರ್ ಜೊತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬ್ಯಾಂಡೇಜ್ ಮಾಡಿಸಿಕೊಂಡು ಬಂದೆ. ಸಂಜೆ ಹೊತ್ತಿಗಾಗಲೇ ಸಿಸಿಟಿವಿ ವಿಡಿಯೋ ಎಲ್ಲಾ ವಾಟ್ಸಪ್ ಗ್ರೂಪ್ ಗಳಿಗೆ ಹೋಗಿ RM, ZM ಗಳೆಲ್ಲಾ ಫೋನ್ ಮಾಡಿ ಮಾತನಾಡಿ congratulations ಹೇಳಿದರು

 

          ಇದಾದ ನಂತರ ನನ್ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಯಿಸಲಾಯಿತು. ಪೊಲೀಸ್ ವಿಚಾರಣೆ, ಸೈಕಿಯಾಟ್ರಿಕ್ ಹೆಲ್ಪ್, ಬ್ಯಾಂಕ್ ವತಿಯಿಂದ ಧನ್ಯವಾದ ಕಾರ್ಯಕ್ರಮ ಇತ್ಯಾದಿಗಳ ವಿಚಾರಕ್ಕಾಗಿ ನನಗೆ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಶಾಖೆಗೆ ವರ್ಗಾವಣೆ ಮಾಡಿದರು. ಭಾನುವಾರ ಲೇಟಾಗಿ ಎದ್ದು ಅವಲಕ್ಕಿ ತಿನ್ನುತ್ತಿರುವಾಗ ಸ್ಟೆಲ್ಲಾ ಥಾಮ್ಸನ್ ಅವರಿಂದ ಥ್ಯಾಂಕ್ ಯು ಎಂಬ ಸಂದೇಶ ಬಂದಿತು. ನಾನು ಯಾವುದೋ ಫೇಕ್ ಅಕೌಂಟ್ ಇರಬೇಕು ಅಂತ ಜಾಸ್ತಿ ಗಮನ ಹರಿಸಲಿಲ್ಲ. ಗುರುವಾರ ಬ್ಯಾಂಕಲ್ಲಿ ಹೀಗೆ ಸಹವರ್ತಿಗಳ ಜೊತೆಹೆ ಊಟ ಮಾಡುತ್ತಿದ್ದಾಗ ಏನೋ ಫ್ಲಾಷ್ ಆಯಿತು. ಸ್ಟೆಲ್ಲಾ ಅವರಿಗೆ ರಿಪ್ಲೈ ಮಾಡಿ ಥ್ಯಾಂಕ್ಸ್ ಎಂದು ಯಾಕೆಕಳಹಿಸಿದ್ದಾರೆ ಎಂದು ಕೇಳಿದೆ. ಸಿಟಿ ಹಾಲ್ ಅವಘಡ, ನಂತರ ಅವಳ ಡಿಪ್ರೆಶನ್ ಇತ್ಯಾದಿಗಳು, ಹೇಗೆ ನನ್ನ ಒಂದು ಕಾಮಿಡಿ ಸ್ಟ್ಯಾಂಡ್ ಅಪ್ ವಿಡಿಯೋ ಅವಳನ್ನು ಸೂಸೈಡ್ ಯೋಚನೆಯಿಂದ ಪಾರು ಮಾಡಿತು ಅಂದು ವಿವರವಾಗಿ ಬರೆದಿದ್ದರು. ನಾನೂ ನನ್ನ ಜೀವನದಲ್ಲಿ ನೆಡೆದ ಬ್ಯಾಂಕ್ ದರೋಡೆಯ ವಿಷಯ ಹೇಳಿಕೊಂಡು ಇವೆಲ್ಲಾ ಸಹಜ, ಏಳು ಸಲ ಬಿದ್ದರೆ ತಪ್ಪಲ್ಲ, ಎಂಟನೇ ಸಲ ಏಳದಿದ್ದರೆ ತಪ್ಪು ಎಂದೆಲ್ಲಾ ವಿವರಿಸಿದೆ. ಅವರು ತುಂಬಾ ಖುಷಿ ಪಟ್ಟರು. ನನಗೆ ಇನ್ನೂ ಜಾಸ್ತಿ ಖುಷಿಯಾದರೂ ಇದು ಯಾಕೋ ನಮ್ಮ ಫ್ರೆಂಡ್ಸ್ ಯಾರೋ ಏನೋ ತರ್ಲೆ ಮಾಡ್ತಾ ಇದ್ದಾರೆ ಅಂತ ಅನಿಸಿತು. ನೀವು ಇಂಡಿಯಾ ಬಂದಾಗ ಹೇಳಿ, ಕರ್ನಾಟಕದಲ್ಲಿ ಒಳ್ಳೊಳ್ಳೆಜಾಗಗಳು ಇದ್ದಾವೆ, ನಿಮಗೆ ಜೀವನಇಷ್ಟೇ ಅಲ್ಲ, ಇದಕ್ಕೂ ಮೀರಿ ತುಂಬಾ ಏನೇನೋಇದೆ ಎಂದು ತಿಳಿಯುತ್ತೆ ಅಂತ ಹೇಳಿದೆ. ಮೂರು ವಾರಗಳ ನಂತರ ಅವರಿಂದ ಫೋನ್ ಬಂದಿತು. ಬೆಂಗಳೂರಿಗೆ ಬರುತ್ತಿರುವ ಮತ್ತು ಒಂದು ತಿಂಗಳ ಸಮಯ ಎಷ್ಟು ಆಗುತ್ತೋ ಅಷ್ಟು ಭಾರತವನ್ನು ನೋಡಿ ಹೋಗಬೇಕೆಂಬ ಅವರ ಪ್ಲಾನ್ ಬಗ್ಗೆ ವಿವರಿಸಿದರು. ಬ್ಯಾಂಕಲ್ಲಿ ಒಂದು ತಿಂಗಳು ರಜಾ ಹಾಕಿ ಹೆಚ್ಚು ಕಮ್ಮಿ ಕರ್ನಾಟಕ ಪೂರ್ತಿ ಸಂಚರಿಸಿದೆವು. ಗೋಕಾಕ್ ಫಾಲ್ಸ್, ಹುಬ್ಬಳ್ಳಿ ರಾಣಿ ಚೆನ್ನಮ್ಮ ಸರ್ಕಲ್, ದಾವಣಗೆರೆ ಬೆಣ್ಣೆ ದೋಸೆ, ಚಿತ್ರದುರ್ಗ ಕೋಟೆ, ಹೀಗೆ ಎಲ್ಲಾ ನೋಡಿಕೊಂಡು ಕೊನೆಯ ದಿನ ಮೈಸೂರು ಚಾಮುಂಡಿ ಬೆಟ್ಟ ನೋಡಲು ಹೋಗಿದ್ದೆವು. ಬೆಟ್ಟದ ಮೇಲಿಂದ ಮೈಸೂರು ಇನ್ನಷ್ಟು ಸುಂದರವಾಗಿ ಕಾಣುತ್ತಿತ್ತು. ಒಂದು ತಿಂಗಳಲ್ಲಿ ಎರಡು ಸಂಪೂರ್ಣ ಬೇರೆ ಲೋಕದ ಜೀವಿಗಳಷ್ಟು ವಿಭಿನ್ನ ಜೀವನ ವ್ಯಕ್ತಿತ್ವ ಹೊಂದಿದ್ದ ನಾವಿಬ್ಬರೂ ತುಂಬಾ ಆತ್ಮೀಯವಾಗಿ ಹೋಗಿದ್ದೆವು. Home is where the heart is ಎಂಬಂತೆ ನಾವು ಎಲ್ಲಿದ್ದೇವೆ ಹ್ಯಾಗಿದ್ದೇವೆ ಅನ್ನೋದಕ್ಕಿಂತ ಎಲ್ಲಿ ಜೀವನ ನೆಡೆವುದೋ ಅದೇ ನಮ್ಮೂರು, ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು ಎಂದು ಯೋಚಿಸುತ್ತಾ ಸ್ಟೆಲ್ಲಾ ಕಡೆ ನೋಡಿದೆ. ಅವಳು ನನ್ನನ್ನು ನೋಡಿ ನಕ್ಕಳು. ಎಲ್ಲೋಲಾಸ್ ವೇಗಾಸ್ ನಲ್ಲಿ ಚಿಟ್ಟೆಯ ಹಾಗೆ ರೆಕ್ಕೆಯ ಬಡಿದುಕೊಂಡು ಹಾರುತ್ತಿದ್ದ ಸ್ಟೆಲ್ಲಾ ಥಾಮ್ಸನ್ ಜೀವನದ ಯಾವ ಒಂದು ಘಟನೆ ಒಂದರ ಮೇಲೊಂದು ಪ್ರಭಾವ ಬೀರಿ ಇಂದು ಇಲ್ಲಿ ಬಂದು ನಿಂತಿರುವುದನ್ನು ನೋಡಿ ಆಶ್ಚರ್ಯವಾಯಿತು

 

ಸಾಂದರ್ಭಿಕ ಚಿತ್ರ: ಐ 

"What are you thinking?" ಅವರು ಕೇಳಿದರು.

 

"Nothing much" ಎಂದುಕೇಳಿ ಕಾರ್ ಪಾರ್ಕಿಂಗ್ ಕಡೆ ಇಬ್ಬರೂ ಹೆಜ್ಜೆ ಹಾಕಿದೆವು