ಫೆಬ್ರವರಿ 2, 2022

What If.. ಕರ್ಣ ಮತ್ತು ಆರ್ಯ

ಹೀಗೇ ಒಂದು ದಿನ ಸಾಯಂಕಾಲ ಕರ್ಣ ಮತ್ತು ಆರ್ಯ ಇಬ್ಬರೂ ತಳ್ಳುವ ಗಾಡಿಯಲ್ಲಿ ಮಾರುವ 'ಫಾಲುದಾ' ತಿನ್ನೋಣ ಅಂತ ಹೋದರು. 

ಮೊದಲ ಬಾರಿ‌ ತಿಂದಿದ್ದರಿಂದ ಆರ್ಯ ತುಂಬಾ ಖುಷಿಯಾಗಿ ಕೇಳಿದಳು, "ಏನಿದು? ಇಷ್ಟು ಸಖತ್ ಆಗಿದೆ. ಇಂಥದೆಲ್ಲಾ ತಿನ್ನೋಕೆ ಸಿಗುತ್ತೆ ಅಂತ ಹೇಗೆ ಗೊತ್ತಾಗುತ್ತೆ" ಅಂತ‌ ಕೇಳಿದಳು.

"ಆಫೀಸಲ್ಲಿ ಒಬ್ಬ ಹೊಸದಾಗಿ ಪರಿಚಯವಾದ ಗೆಳೆಯ, ಪಂಕ್ಯ ಅಂತ, ದೊಡ್ಡ ತರ್ಲೆ ನನ್ಮಗ, ಧಾರವಾಡದವನು, ಅವನ ಸಹವಾಸದಿಂದ ಇದೆಲ್ಲಾ ಶುರುವಾಗಿದ್ದು" ಕರ್ಣ ಹೇಳಿದನು.‌

"ಧಾರವಾಡ" ಪದ ಕೇಳಿದ ಕೂಡಲೇ ತಳ್ಳುವ ಗಾಡಿ ಹುಡುಗ, "ನಿಮ್ದು ಧಾರವಾಡ? ನಮ್ದೂ ಧಾರವಾಡ" ಅಂತ‌ ಬಿಹಾರಿ ಮಿಶ್ರಿತ ಕನ್ನಡದಲ್ಲಿ ಹೇಳುತ್ತಾನೆ.

ಎಲ್ಲಿಂದಲೋ ಬಂದು, ಅರ್ಧಂಬರ್ಧ ಕನ್ನಡ‌ ಕಲಿತು ಜೀವನ ಮಾಡುತ್ತಿರುವ ಈತನ ಊರು ಧಾರವಾಡ ಹೇಗಾಗುತ್ತೆ ಅಂತ ಆರ್ಯ ಯೋಚಿಸುವ ಹೊತ್ತಿಗೆ ಕರ್ಣ, "ಎಲ್ಲಿ ಜೀವನ ನೆಡೆವುದೋ ಅದೇ ನಮ್ಮೂರು, ಯಾರು‌ ಸ್ನೇಹದಿ ಬರುವರೋ ಅವರೇ ನಮ್ಮೂರು" ಅಂತ ಶಂಕ್ರಣ್ಣನ ಹಾಡು ಗುನುಗುತ್ತಾ, ಬಿಲ್ ಕೊಟ್ಟು ಇಬ್ನರೂ‌ ಮನೆಗೆ ತೆರಳುತ್ತಾರೆ.