ಜುಲೈ 3, 2016

ಬಾಳೆಂಬ ಕಿರುಚಿತ್ರದ ಮನಮೋಹಕ ಅತಿಥಿ ಪಾತ್ರಗಳು

"ಕೋತಿ ತಾನು ಕೆಡೋದಲ್ಲದೆ ವನನೆಲ್ಲಾ ಕೆಡಿಸ್ತಂತೆ"

ನಮ್ ಡಾಕ್ಟರ್ ವಿಠ್ಠಲ್ ರಾವ್ ಆಗಾಗ ಹೇಳ್ತಿರ್ತಾರಲ್ಲ, ‘ವೆರಿ ಫೇಮಸ್ ಇನ್ ಸರ್ಜರಿ ಅಂಡ್ ಭರ್ಜರಿ' ಅಂತ, ಅದೇ ಥರ ಶಾಲಾದಿನಗಳಲ್ಲಿ ನಮ್ ಮೇಷ್ಟ್ರುಗಳು / ಮೇಡಂಗಳು ಇಂಥದೊಂದು ಡೈಲಾಗನ್ನು ಯಾವಾಗಲೂ ಹೇಳ್ತಿದ್ರು. ಈಗ ಅಂಥದ್ದೇ ಒಂದು ಸಂದರ್ಭ ಬಂದೊದಗಿದೆ. ಇಷ್ಟು ದಿನ ನಮ್ಮ ಅಪೂರ್ಣ ಕನಸು ಬ್ಲಾಗ್ ನಲ್ಲಿ ಆಗಾಗ 'ಸಾಂದರ್ಭಿಕ ಚಿತ್ರ'ಗಳ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಮ್ಮ ರನ್ನ ಅದೇ ಪ್ರದೀಪ್ ಎಂ ಆಚಾರ್, ಆಗಿದ್ದು ಆಗಲಿ ಅಂತ ಪೆನ್ನು ಪೇಪರು ಕೈಗೆತ್ತಿಕೊಂಡು ನೆನಪುಗಳ ಫ್ಲ್ಯಾಶ್ ಬ್ಯಾಕ್ ಇಂದ ಒಂದು ತಾಜಾ ಕಥೆಯನ್ನು ಹಂಚಿಕೊಂಡಿದ್ದಾರೆ. ಈರೇಗೌಡರು ಬರೆದ ಕಥೆಯನ್ನು ರಾಮ್ ರೆಡ್ಡಿ 'ತಿಥಿ' ಸಿನಿಮಾವನ್ನಾಗಿಸಿದ ಹಾಗೆ, 'ಅತಿಥಿ' ಬರಹಾಗಾರನಾಗಿ ನಮ್ ಪ್ರದೀಪ ಬರೆದ 'ಬಾಳೆಂಬ ಕಿರುಚಿತ್ರದ ಮನಮೋಹಕ ಅತಿಥಿ ಪಾತ್ರಗಳು' ಅಂಕಣವನ್ನು ಟಂಕಿಸಿ (ಟೈಪಿಸಿ), ಅಲ್ಲಲ್ಲಿ ಬೇಡದೇ ಇರೋ ಪಂಚ್ ಲೈನ್ ಗಳನ್ನು ಸೇರಿಸಿ, ಈಗ ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ಈ ಅಂಕಣವು 'ತಿಥಿ' ಚಿತ್ರದಷ್ಟೇ ಚೆನ್ನಾಗಿದೆಯೋ, ಇಲ್ಲಾ ಎಂದಿನ ಹಾಗೆ ನಿಮ್ಮ ಅಮೂಲ್ಯ ಸಮಯದ 'ತಿಥಿ'ಯಾಯಿತೋ ಎಂದು ನಿರ್ಧರಿಸುವುದು ನಿಮಗೆ ಬಿಟ್ಟಿದ್ದು. ಈ ಅಂಕಣ ಓದಿದ ಮೇಲೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನನಗಾದರೂ ಇಲ್ಲವೇ ಪ್ರದೀಪ ಜೊತೆಗಾದರೂ ಹಂಚಿಕೊಳ್ಳಬಹುದು. 

WhatsApp ಸಂಖ್ಯೆ: +91 974374 2051

ಇನ್ನು ಜಾಸ್ತಿ ತಲೆ ತಿನ್ನೋದಿಲ್ಲ, Over to Pradeep.

***

ಆಗ ನಾನು ಇಂಜಿನಿಯರಿಂಗ್ ಮಾಡುತಿದ್ದ ಕಾಲ. ನಾನು ಶಿವಮೊಗ್ಗದ ನಮ್ಮ ಕಾಲೇಜಿಂದ 2 ವಾರಕ್ಕೊಮ್ಮೆ 80 ಕಿಲೋಮೀಟರ್ ದೂರ ಇದ್ದ ನಮ್ಮ ಮನೆಗೆ ಹೋಗ್ತಿದ್ದೆ. ಇದ್ದಿದ್ದು ಒಂದು ಬೇಸಿಕ್ ಸೆಟ್ ಅಂದುಕೊಳ್ಳೋಣ. ಆಗ WhatsApp ಹುಟ್ಟಿನೇ ಇರಲಿಲ್ಲ, facebook ಬಗ್ಗೆ ನಮಗೂ ಅಷ್ಟಾಗಿ ಗೊತ್ತಿರಲಿಲ್ಲ. ನಮ್ಮ ಊರ ಕಡೆ ಹೋಗುವ ಬಸ್ಸಿನಲ್ಲಿ ಹುಡುಗೀರು ಸಿಗ್ತಾರೆ ಅಂದುಕೊಳ್ಳೋದು ಅಪ್ಪು ಚಿತ್ರಕ್ಕೆ ಮೆಜೆಸ್ಟಿಕ್- ಹತ್ತಿರದ ಚಿತ್ರಮಂದಿರದಲ್ಲಿ first day-first show ಸಿಗುತ್ತೆ ಅಂದುಕೊಂಡ ಹಾಗೆ. ಆದರೂ ಆವಾಗ ಈವಾಗ ಹುಡುಗೀರು ಕಾಣ ಸಿಗ್ತಿದ್ರು ಅಂದುಕೊಳ್ಳಿ. ಅಂದು 2010, ಸೆಪ್ಟೆಂಬರ್ 8 ಗುರುವಾರ, ನಾನು ಮಧ್ಯಾಹ್ನ 2:30 ಕೃಷ್ಣ ಬಸ್ಸಿನಲ್ಲಿ, ಇಲ್ಲದ ರಾಧೆಯ ಕನಸು ಕಾಣುತ್ತ ಮನೆಗೆ ಹೊರಟಿದ್ದೆ. ಶುಕ್ರವಾರ ರಂಜಾನ್ ಹಬ್ಬ-ಗೆ ಬೇರೆ ಇತ್ತಲ್ಲ, ಅದಕ್ಕೆ ನಮ್ದುಕೆ ಶಿವಮೊಗ್ಗದಿಂದ ತುಂಬಾ ಜನ ಮನೆಗೆ ಹೊಂಟಿದ್ರು. ಹಾಗಾಗಿ ಬಸ್ ಸಿಕ್ಕಾಪಟ್ಟೆ rush ಆಗಿತ್ತು. ಅದೃಷ್ಟವಶಾತ್, ನಾನು main bus stand ಗೆ ಹೋಗಿದ್ದರಿಂದ ಸೀಟ್ ಸಿಕ್ಕಿತ್ತು. ನನ್ನ ಸೀಟಿನಿಂದ ಸ್ವಲ್ಪ ಮುಂದೆ ಇಬ್ಬರು ಹುಡುಗೀರು ನಿಂತಿದ್ರು. ಅದರಲ್ಲಿ ಒಬ್ಬಳು ನಮ್ಮ ಕಾಲೇಜ್-ನವಳೇ ಆಗಿದ್ದಳು. ಇನ್ನೊಬ್ಬರು ಯಾರೋ ಗೊತ್ತಿರಲಿಲ್ಲ, ಸಿಲಬಸ್ ಗೆ ಇರೋದು ಓದುವುದೇ ಕಷ್ಟವಾಗಿರುವಾಗ, ಸಿಲಬಸ್ ಗೆ ಇಲ್ಲದ್ದಲ್ಲೇ ನಮಗ್ಯಾಕೆ?! ಶಿವಮೊಗ್ಗದಿಂದ ಶಿಕಾರಿಪುರಕ್ಕೆ 50 km, ಪಾಪ ಅಷ್ಟು ದೂರದವರೆಗೂ ಅವರು ನಿಂತೇ ಇದ್ದರು. ಶಿಕಾರಿಪುರದಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದವರು ಇಳಿದು ಹೋದರು, ಆಗ ಅಪರಿಚಿತ ಹುಡುಗಿ ಬಂದು ನನ್ನ ಪಕ್ಕ ಕುಳಿತಳು . ನಾನು ಮೊದಲೇ ಹೇಳಿದ ಹಾಗೆ, ಅಪ್ಪು ಚಿತ್ರಕ್ಕೆ ಮೊದಲ ದಿನದ ಟಿಕೆಟ್ ಸಿಕ್ಕಷ್ಟು ಆಗಿತ್ತು. ಟಿಕೆಟ್ ಸಿಕ್ಕ ಮೇಲೆ ಸಿನಿಮಾ ಶುರು ಮಾಡದೇ ಇರ್ತೀವಾ? ಶುರುವಾಯ್ತು ನೋಡಿ, ನಮ್ಮದೊಂದು ಕಿರುಚಿತ್ರ.

ಅಂತ ಸಮಯದಲ್ಲಿ ಸುಮ್ಮನೆ ಕುಳಿತರೆ ನಮ್ ಹುಡುಗರ ಹೆಸರಿಗೇ ಅವಮಾನ, ಸುಮ್ಮನಿರಲಾರದೇ ನಾನೇ ಮೊದಲು ಮಾತನಾಡಿಸಿಬಿಟ್ಟೆ. ಹೆಸರು, ಕಾಲೇಜ್, ಊರು, ಬ್ರಾಂಚ್, ಎಲ್ಲದರ ವಿಚಾರ ವಿನಿಮಯ ಆಯಿತು. ಇದು ಮಾಮೂಲಿ ಬಿಡಿ ಯಾರೋ ಬಸ್ಸಲ್ಲಿ  ಸಿಕ್ತಾರೆ, ಮಾತಾಡ್ತೀವಿ, ಅವರು ಒಂದು ದಿನದಲ್ಲಿ ಮರೆತು ಹೋಗ್ತಾರೆ . ನಾವ್ ನಮಗೆ ಸಿಕ್ಕಿರೋದು ಹುಡುಗಿ ಆಗಿದ್ರೆ, ಅದೂ ನೋಡೋಕೆ ಚೆನ್ನಾಗಿದ್ರೆ ಒಂದು ಮೂರು-ನಾಲ್ಕು ದಿನ ಹೆಚ್ಚು ನೆನಪಿನಲ್ಲಿ ಉಳಿಯುತ್ತಾರೆ . ಮತ್ತೆ ಎಲ್ಲಾದರೂ ಸಿಕ್ಕರೆ ಎಲ್ಲೋ ನೋಡಿದ್ದೆವಲ್ಲಾ ಅನ್ನೋ ಮಟ್ಟಕ್ಕೆ ಅಸ್ಪಷ್ಟವಾಗಿ ನೆನಪಾಗುತ್ತಾರೆ . ನಮ್ಮದೂ ಥರದ್ದೇ ಕೇಸಾಗಿತ್ತು ಅನಿಸುತ್ತೆ. ಪ್ರಯಾಣ ಆಗಿ 4-5 ದಿನ ಕಳೆದಿತ್ತು. ನಾನು city ಹೊರಗಡೆ ಇರೋ ನಮ್ಮ campus hostel ನಿಂದ city ಗೆ ಹೋಗಿದ್ದೆ . ನಮ್ ಹುಡುಗ ಒಬ್ಬನಿಗೆ ಜ್ವರ ಬಂದಿತ್ತು ಅಂತ crocin ತರಲು ಹೇಳಿದ್ದ . ಪಾಪ, ಜ್ವರ ಬರೋ ಅಂಥದ್ದು ಏನು ನೋಡಿದ್ನೋ ಅವನಿಗೆ ಗೊತ್ತು! ಹಾಗೇ ನಾನೂ ನನ್ನ ಕೆಲಸ ಮುಗಿಸಿ medicals ಗೆ tablets ತೆಗೆದುಕೊಳ್ಳೋಣ ಅಂತ ಹೋಗಿದ್ದೆ. ಇಂಗ್ಲೀಷ್ ಶಬ್ದಗಳು ಬಂದು ನಮ್ಮ ಕನ್ನಡದ ಕೆಲವೊಂದು ಮುಖ್ಯವಾದ ಪದಗಳೇ ನೆನಪಾಗಲ್ಲ. ಅದೇನೋ coincidence ಅಂತಾರಲ್ಲ, ಅದೇ ಆಗಿದ್ದು ಅವತ್ತು. ನಾನು ಬಸ್ಸಲ್ಲಿ ಮೀಟ್ ಮಾಡಿದ್ದ ಅಕ್ಷತಾ ಅಲ್ಲಿ ಮತ್ತೆ ಸಿಕ್ಕಿದ್ದು ಇಬ್ಬರಿಗೂ ಖುಷಿ ಆಗಿತ್ತು. ಸ್ವಲ್ಪ ಹೊತ್ತು ಮಾತು ಕಥೆ ಆದ ಮೇಲೆ ಫೋನ್ ನಂಬರ್ ವಿನಿಮಯ ಆಯಿತು. ಆಗ ನಾವಿನ್ನೂ basic messages ಕಾಲದಲ್ಲೇ ಇದ್ವಲ್ಲಾ, ಹಾಗಾಗಿ ದಿನಕ್ಕೆ 100 messages free ಇರೋ plan ಇತ್ತು ಅನಿಸುತ್ತೆ. ಹಾಗೇ ಮೆಸೇಜ್ ಮಾಡ್ತಿದ್ವಿ, ಆಗಾಗ ಕಾಲ್ ಮಾಡ್ತಿದ್ವಿ. coincidence ಮತ್ತೆ ಆಯಿತು. ಇದು ಸುಳ್ಳು ಅನಿಸಿದರೂ ನಿಜಾನೇ. ಸಲ ಅವಳಿಗೆ ನಾನು ಸೀಟ್ ಬಿಟ್ಟುಕೊಟ್ಟಿದ್ದೆ. 

 
ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್

ಇದಾಗಿ ಸುಮಾರು ಒಂದು ತಿಂಗಳಲ್ಲಿ ದೀಪಾವಳಿ ಹಬ್ಬ ಇತ್ತು. ಆಗ ನಾವಿಬ್ಬರೂ ಒಟ್ಟಿಗೆ ಹೋಗುವ ಪ್ಲಾನ್ ಮಾಡಿದ್ವಿ. ಅವಳು ಆಗಲೇ main bus stop ಗೆ ಹೋಗಿ ನನಗಾಗಿ ಸೀಟ್ ಹಿಡಿದಿದ್ದಳು. ನಾನು ಕಾಲೇಜಿಂದ ಹೊರಡೋಕೆ ಲೇಟ್ ಆಗಿತ್ತು. ಅರ್ಜೆಂಟ್ ಅರ್ಜೆಂಟಲ್ಲಿ friends ಜೊತೆ ಆಟೋದಲ್ಲಿ ಹೊರಟಿದ್ದೆ. ಎಲ್ಲಿ ಬಸ್ ಹೋಗಿಬಿಡುತ್ತೋ ಅಂತ ಭಯ ಆಗಿತ್ತು. ನನ್ನ ಪುಣ್ಯ, ಬಸ್ ಹೊರಡೋಕೆ ರೆಡಿ ಆಗಿತ್ತು. ನಾನು reach ಆದೆ. ದಿನ ಇಬ್ಬರೂ ಒಟ್ಟಿಗೆ ಹೋದ್ವಿ, ದಾರಿಯುದ್ದಕ್ಕೂ ಮಾತಾಡಿದ್ವಿ. ಅವಳು ಅವಳ ಫ್ಯಾಮಿಲಿ ಬಗ್ಗೆ ಹೇಳಿದಳು. ಅವಳ ಮದುವೆ ಬಗ್ಗೆ decide ಆಗಿದ್ದನ್ನು ಹೇಳಿದಳು. ಅವಳ ಸೋದರ ಅತ್ತೆಯ ಮಗನಿಗೆ ಅವಳನ್ನು ಮದುವೆ ಮಾಡಲು ನಿಶ್ಚಯವಾಗಿತ್ತಂತೆ. ಇಬ್ಬರಿಗೂ ಇದು ಇಷ್ಟವಾಗಿತ್ತಂತೆ. ಹೀಗೆ just ಮಾತ್ ಮಾತಲ್ಲಿ ಊರು ಬಂದಿದ್ದೇ ಗೊತ್ತಾಗಲಿಲ್ಲ. Engineering ಸೇರಿಕೊಂಡಾದ ಮೇಲೆ ನನಗೊಬ್ಬಳು ಒಳ್ಳೆ ಗೆಳತಿ ಸಿಕ್ಕಳು ಎಂಬ ಖುಷಿ ಇತ್ತು. ನಾವು ಮೊದಲೇ mechanical branch ಆಗಿದ್ದರಿಂದ ಕಾಲೇಜಿನಲ್ಲಿ ಹುಡುಗಿಯರನ್ನು ಕಣ್ಣು ಕಣ್ಣು ಬಿಟ್ಕೊಂಡು ನೋಡೋದಷ್ಟೇ ಹೊರತು, ಮಾತನಾಡಿಸುವ ಸನ್ನಿವೇಶ ಯಾವುದೂ ಇರಲಿಲ್ಲ. ಇನ್ನು friends ಆಗೋದು ಎಲ್ಲಿಂದ ಬಂತು?!

ಆದರೆ ಇದು ತುಂಬಾ ದಿನ ಮುಂದುವರೆಯಲೇ ಇಲ್ಲ. ನಿಧಾನವಾಗಿ ಅವಳು ಮೆಸೇಜ್ ಮಾಡುವುದನ್ನು ನಿಲ್ಲಿಸಿದಳು. ದೀಪಾವಳಿಗೆ ಒಟ್ಟಿಗೆ ಹೋಗಿದ್ದು ಬಿಟ್ಟರೆ ಅವಳು ಮತ್ತೆ ಭೇಟಿಯಾಗಲೇ ಇಲ್ಲ. ನನ್ನ ಜೊತೆ ಹೋಗುವಾಗ ದಿನ ಅವಳು ಹುಡುಗನ ಜೊತೆ ಮಾತಾಡ್ತಿದ್ಳು. ಅವನ ಹತ್ತಿರ ನನ್ನ ಬಗ್ಗೆ ಎಲ್ಲಾ ಹೇಳಿದಳು. ಆಮೇಲೆ ಅವಳು ನಂಬರ್ change ಮಾಡಿದಳು ಅನಿಸುತ್ತೆ. ನಾನು ಕೆಲವು ಸಲ call ಮಾಡಿದೆ, message ಮಾಡಿದೆ, reply ಬರಲಿಲ್ಲ, ಅದಿಕ್ಕೆ ಸುಮ್ಮನಾದೆ. Facebook ನಲ್ಲಿ ಕೆಲವು ಸಲ ಅವಳನ್ನು ಹುಡುಕಲು ಮಾಡಿದ ಪ್ರಯತ್ನ ನೀರಿಗೆ ಎಸೆದ ಕಲ್ಲು ಹುಡುಕಿದಂತಾಗಿತ್ತು. ಇದು 6 ವರ್ಷಗಳ ಹಿಂದಿನ ಕಥೆ. ಅವಳ ಮುಖ ಇನ್ನೂ ನೆನಪಿದೆ, ಅವಳ ನಗು ಇನ್ನೂ ಮರೆತಿಲ್ಲ, ಅವಳ ಮಾತುಗಳೂ ಕೂಡ ನೆನಪಿದೆ. ಈಗಲೂ ಆಗೊಮ್ಮೆ, ಈಗೊಮ್ಮೆ facebook ನಲ್ಲಿ Akshatha ಅಂತ search ಮಾಡ್ತೀನಿ, ಅವಳನ್ನು ಹುಡುಕಲಾಗದು ಎಂದು ತಿಳಿದಿದ್ದರೂ.

ಈಗ ಅವಳಿಗೆ ಮದುವೆಯಾಗಿ ಒಂದು ಮಗೂನೂ ಇರಬಹುದು. ಒಂದು ತಿಂಗಳಲ್ಲಿ ೨-೩ ಸಲ ಆದ coincidence, ಕಳೆದ 6 ವರ್ಷಗಳಲ್ಲಿ ಮತ್ತೆ ಆಗಲೇ ಇಲ್ಲ. ಅದೇನೇ ಇರಲಿ, ನನ್ನ ಜೀವನದ ಒಂದು ತಿಂಗಳು ಪೂರ್ತಿ ಗೆಳತಿಯಾಗಿದ್ದು, ನನ್ನ ಮನಸ್ಸಿನಲ್ಲಿ ಮರೆಯದೆ ಗೆಳತಿಯಾಗಿ ಉಳಿದ ಅಕ್ಷತಾಳಿಗೆ ಒಂದು ನಗುಮೊಗದ ಧನ್ಯವಾದ.

 
ಸಾಂದರ್ಭಿಕ ಚಿತ್ರ: ಪ್ರದೀಪ್ ಎಂ ಆಚಾರ್

ನನ್ನ ಜೀವನದಲ್ಲಿ ನಾನು ಒಬ್ಬನೇ ಬದುಕುತ್ತೀನಿ, ಅಥವಾ ನನ್ನ ಕುಟುಂಬ ದವರಷ್ಟೇ ಸಾಕು, ಬೇರೆ ಯಾರೂ ಬೇಡ ಎಂದು ಬದುಕುವವರು ಬೆರಳೆಣಿಕೆಯಷ್ಟು ಮಂದಿ ಇರಬಹುದು. ಗೆಳೆಯರು-ಗೆಳತಿಯರು ಎಲ್ಲೆಲ್ಲೋ ಹೆಂಗೆಂಗೋ ಸಿಕ್ಕಿಬಿಡುತ್ತಾರೆ. ಓದೋಕೆ ಸೇರಿಕೊಳ್ಳುವ ಸ್ಕೂಲ್ / ಕಾಲೇಜ್ ಇರಬಹುದು. ಪಕ್ಕದ ಮನೆಯವರು ಇರಬಹುದು, ಆಟ ಆಡೋಕೆ ಹೋದಾಗ ಅಥವಾ ಇನ್ನೆಲ್ಲೋ ಪ್ರವಾಸ ಹೋದಾಗ; ಹೀಗೆ ಸ್ನೇಹ ಆಗಲು ಅದೆಷ್ಟೋ ಅವಕಾಶಗಳು ಬರುತ್ತಲೇ ಇರುತ್ತವೆ. ಆದರೆ ಒಬ್ಬ ಗೆಳೆಯ / ಗೆಳತಿ ಹೇಗೆ ಸಿಕ್ಕಿದರು ಅನ್ನೋದು ಮುಖ್ಯ ಅಲ್ಲ, ಅವರು ನಮಗೆ ಎಷ್ಟು ಹತ್ತಿರವಾಗಿದ್ದಾರೆ, ಅಥವಾ ಎಷ್ಟು ದಿನ ಉಳಿಯುತ್ತಾರೆ ಎನ್ನುವುದು ಮುಖ್ಯ. ಇನ್ನು ಕೆಲವರಿಗೆ ಎಷ್ಟು ದಿನ ಉಳಿಯುತ್ತಾರೆ ಎನ್ನುವುದಕ್ಕಿಂತ ಇದ್ದಷ್ಟು ದಿನ ನಮ್ಮೊಂದಿಗೆ ಎಷ್ಟು ಖುಷಿಯ ಕ್ಷಣಗಳನ್ನು ಹಂಚಿಕೊಂಡ್ರು, ನಮ್ಮ ನೋವಿನಲ್ಲಿ ಎಷ್ಟು ಕಾಲ ಜೊತೆಯಾಗಿದ್ರು ಅನ್ನೋದು ಮುಖ್ಯವಾಗುತ್ತೆ.

ನಮ್ಮ ಹಿಡಿತದಲ್ಲಿ ಇದ್ದೂ ಇಲ್ಲದಂತೆ ಸಾಗುವ ಜೀವನದ ಕಿರುಚಿತ್ರದಲ್ಲಿ ಕೆಲವರು ಆದಿಯಿಂದ ಅಂತ್ಯದವರೆಗೂ  ಜೊತೆಗಿದ್ದರೆ, ಇನ್ನೂ ಕೆಲವರು ಮನಮೋಹಕ ಅತಿಥಿ ಪಾತ್ರಗಳಲ್ಲಿ ಸ್ವಲ್ಪವೇ ಹೊತ್ತು ಬಂದರೂ ಚಿರಕಾಲ ನೆನಪಿನಲ್ಲುಳಿಯುತ್ತಾರೆ. ನನ್ನ ಜೀವನವೆಂಬ ಕಿರುಚಿತ್ರ ಒಂದು ಚಿಕ್ಕ ಅತಿಥಿ ಪಾತ್ರದ ಪುಟ್ಟ ಪರಿಚಯ ಇದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ